Friday, April 27, 2007

ಕಾಗದ ಬಂತು ಕಾಗದವು

"ನೀವೇನೆ ಹೇಳಿ, ಈ ಇ-ಮೇಲುಗಳು ಅಂಚೆ ಪತ್ರಕ್ಕೆ ಸಾಟಿ ಅಲ್ಲ ಬಿಡಿ."
ಬಹಳ ಜನರ ಬಾಯಲ್ಲಿ (ಚಾಟಲ್ಲಿ) ಈ ಮಾತನ್ನು ಕೇಳಿದ್ದೇನೆ. ಆದರೆ ನನಗೆ ಎಂದೂ ಹಾಗೆ ಅನ್ನಿಸಿರಲಿಲ್ಲ. ಯಾಕೆಂದರೆ ನನಗೆ ಯಾರೂ ಪತ್ರ ಬರೆದಿರಲಿಲ್ಲ. ನನ್ನ ಪತ್ರಕ್ಕೂ ಯಾರೂ ಉತ್ತರ ಬರೆದಿಲ್ಲ; ಯಾಕೆಂದರೆ ನಾನಿನ್ನೂ ಪತ್ರವನ್ನೇ ಬರೆದಿಲ್ಲ! ಯಾಕೋ ಈ ಅಂಚೆ ಪತ್ರವೆಂದರೆ ನನಗೆ ನಮ್ಮೂರಿಗೆ ಉರಿಬಿಸಿಲಿನಲ್ಲಿ ಸೈಕಲ್ ತುಳಿದುಕೊಂಡು ಬರುವ ಖಾಕಿ ಬಟ್ಟೆಯ ಅಂಚೆಯಣ್ಣನೇ ನೆನಪಾಗುವುದು.

ಅದೆಷ್ಟು ಹೆಸರು ಅವನಿಗೆ!
"ಅಂಚೆಯಣ್ಣ"
"ಓಲೆ ಮಾಮ"
"ಪೋಸ್ಟ್ ಮ್ಯಾನು"
"ಪೋಸ್ಟ್ ಮ್ಯಾನ್ ಅಂಕಲ್ಲು"
"ಆ ಕಾಗದ್ದಂವ"
ಹೀಗೆ ಇನ್ನು ಎಷ್ಟೊ!
ಮಧ್ಯಾಹ್ನ ಊಟಮಾಡಿ ಜಗಲಿ ಮೇಲೆ ವರಗಲ್ಗೆಗೆ ವರಗಿ ಕೂತು, ಕೈಯಲ್ಲಿ ಕುಮಾರವ್ಯಾಸನ ಭಾರತ ಹಿಡ್ಕಂದು ತೂಕಡ್ಸ್ತಾ ಇದ್ದಿದ್ದಿ. ಹುಣ್ಸೇ ಮರ್ದ್ ತಿರ್ವಗೆ ಸೈಕಲ್ ಬೆಲ್ ಶಬ್ದ ಕೇಳಿ ಎದ್ದು ಹೆಬ್ಬಾಲಿಗ್ ಓಡಿದಿ. ರಸ್ತಿಗೆ ಇಣುಕಿ ನೋಡಿದ್ರೆ ಹಳೇ ಪೇಪರ್ ಸಾಬ!

ಪೋಸ್ಟ್ ಮ್ಯಾನು, ಪೋಸ್ಟು ಅಂದಾಗ ಎಲ್ಲಕ್ಕಿಂತ ಮೊದಲು ನೆನಪಾಗುವುದು ನಾನು ಪ್ರಾಥಮಿಕ ಶಾಲೆಯಲ್ಲಿ ಓದಿದ ಈ ಪದ್ಯ.


ಓಲೆಯ ಹಂಚಲು ಹೋಗುವೆ ನಾನು
ತೋರಲು ಆಗಸದಲಿ ಬಿಳಿ ಬಾನು
ಮನೆಯಲಿ ನೀವು ಬಿಸಿಲಲಿ ನಾವು
ಕಾಗದ ಬಂತು ಕಾಗದವು

ಹೆಗಲಲಿ ಹಳದಿಯ ಹಸುಬೆಯ ನೋಡಿ
ಕಾಲಲಿ ಚರ್ಮದ ಎಕ್ಕಡ ಜೋಡಿ
ತಲೆಯಲಿ ಖಾಕಿಯ ಪಗಡಿಯ ನೋಡಿ
ಓಲೆಯ ತಂದೆನು ಓಲೆಯನು

ಒಳಗಿಂದಲೆ ಜನರೆನ್ನನು ಕಂಡು
ಬೇಗನೆ ಹೊರ ಅಂಗಳಕೆ ಬಂದು
ಕಾಗದವಿದೆಯೇ ಎನ್ನುವುದುಂಟು
ಕಾಗದ ಬಂತು ಕಾಗದವು

ಸೊಗಸಿನ ಸುದ್ದಿಯ ತರುವೆನು ನಿಮಗೆ
ವ್ಯಸನದ ವಾರ್ತೆಯ ಕೊಡುವೆನು ತಮಗೆ
ಎಲ್ಲಾ ಸುದ್ದಿಗಳೊಂದೇ ನಮಗೆ
ಓಲೆಯ ತಂದೆ ಓಲೆಯನು

ಇದು ಧನಹೀನರ, ಇದು ಧನವಂತರ
ಇದು ಗುಣಹೀನರ, ಇದು ಗುಣವಂತರ
ಕಾಗದವೆನ್ನುತ ಮಾಡೆನು ಅಂತರ
ಕಾಗದ ಬಂತು ಕಾಗದವು

ಓಲೆಯ ಕೊಡುವಧಿಕಾರಿಯು ನಾನು
ಆದರೆ ಅದರಲಿ ಬರೆದುದು ಏನು ?
ಎಂಬುದನರಿಯೆನು ಬಲು ಸುಖಿ ನಾನು
ಕಾಗದ ಬಂತು ಕಾಗದವು.
- ದಿನಕರ ದೇಸಾಯಿ.

ಇಂದು ಇದನ್ನು ಬರೆಯುವಂತೆ ಮಾಡಿದ್ದು ಅವಳ (ಪೋನ್) ಕಾಲಿನ ನೆನಪು. ಎರಡು ತಿಂಗಳಾಗುತ್ತಾ ಬಂತು ಅವಳ ಪತ್ರ ನನ್ನ ಕೈಸೇರಿ. ಇನ್ನೂ ಮರುಪತ್ರ (ಉತ್ತರ ಬರೆಯಲು ಅವಳೇನು ಪ್ರಶ್ನೆ ಬಿಟ್ಟಿಲ್ಲ!) ಬರೆದಿಲ್ಲ. ಹಾಗಾಗಿ ಸಿಟ್ಟಾಗಿದ್ದಾಳೆ.
ಇಂದೇ ಹೋಗಿ (ಎಲ್ಲಿಗೆ? ಗೊತ್ತಿಲ್ಲ) ಒಂದು ಅಂತರ್ದೇಶಿ ಪತ್ರ ಕೊಂಡುತಂದು ಬರೆಯಬೇಕು. ಪಾಪ, ಕಾಯುತ್ತಿದ್ದಾಳೆ.

8 comments:

ಖುಶ್-ಖುಶಿ said...

ಇನ್ನೂ ಬರದ್ದಿಲ್ಯನ ಮಂಗಾ??? ಪಾಪ ಕೂಸು..
ಈ ವೀಕೆಂಡ ಕೂತ್ಕಂಡು ಬರಿ,ಏನಾದ್ರು ಸಹಾಯ ಬೇಕಾದ್ರೆ ಫೋನ್ ಮಾಡು! ಹಂಗೆ ನಂದೊಂದು 'ಹಾಯ್' ಹೇಳ್ಬಿಡು ಕೂಸಿಗೆ ಅಕಾ?

Alpazna said...

@ಖುಶ್-ಖುಶಿ,
ತೊ! ಬರ್ಯಕೆ ಆಗಲ್ಲೆ..
ಹೂಂ... ಬರಿತಿ ಈ ವೀಕೆಂಡು..
ಸಹಾಯ.. ಗೊತ್ತಿಲ್ಲೆ.. ಬೇಕಾಗ್ತೇನ:)

ಸುಶ್ರುತ ದೊಡ್ಡೇರಿ said...

ಮಳ್ಳಾ... ಪತ್ರ ಬರಿಯದ್ರಗೆ ಇರೋ ಮಜಾನೇ ಮಜಾ... ಅದ್ರಲ್ಲೂ ಅವ್ಳಿಗೆ ಬರಿಯೋ ಒಲವಿನ ಓಲೆ...ಬೇಗ ಬರಿ... ಪಾಪ ಅತ್ಗೆ... ;) ಸಹಾಯಕ್ಕೆ ನಾನೂ ರೆಡಿ! :-)

ದಿನಕರ ದೇಸಾಯಿ ಪದ್ಯ ಕೊಟ್ಟಿದ್ದಕ್ಕೆ ಥ್ಯಾಂಕ್ಸ್. ನಂಗೆ ಪತ್ರ ಅಂದಕೂಡ್ಲೆ ಒಂದು ಹಿಂದಿ ಚಿತ್ರಗೀತೆ ನೆನಪಾಗ್ತು: 'ಚಿಟ್ಟೀ ಆಯೀ ಹೇ ಆಯೀ ಹೇ ಚಿಟ್ಟೀ ಆಯೀ ಹೇ.. ಬಡೇ ದಿನೋಂಕೇ ಬಾದ್.. ಹಮ್ ಬೇವತೋಂಕೋ ಯಾದ್..' ಅದರ ಬಗ್ಗೆ ಸಧ್ಯದಲ್ಲೇ ಬರಿಯಂವ ಇದ್ದಿ ನಾನು.. :)

Alpazna said...

@ಸುಶ್ರುತ,
ಏನ್ ಮಜಾನ ಎನ..
ಬರ್ದ್ಮೇಲೆ ಹೇಳ್ತಿ ಹೆಂಗಿತ್ತು ಅಂತ..:)

ಶ್ಯಾಮಾ said...

ಯಾಕೆಂದರೆ ನಾನಿನ್ನೂ ಪತ್ರವನ್ನೇ ಬರೆದಿಲ್ಲ!

ಓದಿ ಆಶ್ಚರ್ಯ ಆತು... ಪತ್ರಾನೇ ಬರಿದೆ ಇದ್ದವರು ಇಡ್ವಲ್ಲಾ ಅಂತ... ಪಾತ್ರ ಬರಯೋದು ಪಾತ್ರ ಓಡೋದು ಆಹಾ ಆ ಖೂಷಿನೆ ಬೇರೆ... ನನ್ನ ಹತ್ರ ಪಾತ್ರಗಳ ರಾಶೀನೆ ಇದ್ದು.. ಯಾವಾಗಿಂದನೋ ಒಂದೂ ಕಳೆಯದಂಗೆ ಜೋಪಾನ ಮಾಡಿ ಇಟ್ಟಿದ್ದು.. ಬೇಜಾರಾದಗೆಲ್ಲ ತೆಗ್ದು ಓದ್ತಾ ಇದ್ರೆ ಏನೋ ಒಂಥರ ಮಜ..... ಮತ್ತೆ ದಿನಕರ ದೇಸಾಯಿ ಪದ್ಯ ನೆನಪಿಸಿದ್ದಕ್ಕೆ thanks
ಮತ್ತೆ 2 ತಿಂಗಳ ಹಿಂದೆ ಬಂದ ಪಾತ್ರಕ್ಕೆ ಇನ್ನೊ ಉತ್ತರ ಬರಿದೆ ಇದ್ದಿದ್ದು ಓದಿ ಛೇ ಅನ್ನಿಸ್ತು ಬೇಗ ಬರಿ ಪಾಪ

Alpazna said...

@ಶ್ಯಾಮಾ,
ಕಾಮೆಂಟಿಗೆ ಥ್ಯಾಂಕ್ಸು!

ಬಹಳಾ ಮಿಸ್ ಮಾಡ್ಕ್ಯಬುಟಿದಿ ಲೈಫಗೆ.
ಇರ್ಲಿ, ಈಗ ಶುರುಹಚ್ಗ್ಯತ್ತಿ..

ಬರ್ಯವು ಅಂದ್ಕಂಡಿದ್ದಿ.. ಟೈಮೇ ಸಿಗ್ತಾ ಇಲ್ಲೆ:)

Ranju said...

ಅಯ್ಯೋ ದೇವರೆ ಎರೆಡು ತಿಂಗಳಿಂದ ಆ ಪತ್ರನಾ ಹಂಗೆ ಇಟ್ಟ್ಕಂಡು ಕೂತಿದ್ಯಾ?
ತೀರಾ ಇಷ್ಟೇಲ್ಲಾ ಕಾಯಿಸದು ಒಳ್ಳೆದು ಅಲ್ಲಾ ಮರಾಯಾ.
ಟೈಮ್ ಸಿಗದಲ್ಲಾ ಟೈಮ್ ಮಾಡಿಕೊಳ್ಳವು.
ದಿನಕರ ದೇಸಾಯಿ ಪದ್ಯ ಚನ್ನಾಗಿ ಇದ್ದು.
anyway ಈ ವೀಕೆಂಡು ಪತ್ರ ಬರದು ಬಿಡು....

Alpazna said...

@ranjana,
Thanks for your comment:)